ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಲ್ಲಿ ಮಾನವರಹಿತ ತೂಕ ಅಳವಡಿಸಿ ರೈತರಿಗೆ ನ್ಯಾಯ ಒದಗಿಸಿದರೆ, ಖುದ್ದಾಗಿ ಬಂದು ನಿಮಗೆ ಸನ್ಮಾನ ಮಾಡುತ್ತೇನೆ” ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.
ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿಯವರು ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿದರು. “ನನ್ನ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲಿ. ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಯಾರ ಹತ್ತಿರವೂ ಕಪ್ ಚಹಾ ಸಹ ಕುಡಿದಿಲ್ಲ. ವಿನಾಕಾರಣ ನನ್ನ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಅಧಿಕಾರಿಗಳ ಮತ್ತು ಗುತ್ತಿಗೆದಾರರ ಹತ್ತಿರ ಕಮೀಷನ್ ಹಣ ಪಡೆಯುವುದು ನಿಮ್ಮ ಸಹೋದರನಿಗೆ ಚೆನ್ನಾಗಿ ಗೊತ್ತಿದೆ” ಎಂದು ಕಿಡಿಕಾರಿದರು.
ನಿರಾಣಿಯವರು ನಕಲಿ ಮತದಾರರನ್ನು ಸೃಷ್ಟಿಸಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಿಂದ ಜನರು ನನ್ನನ್ನು ಮೂರು ಸಲ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಯಾರ ಆಸ್ತಿ ಎಷ್ಟು ಇದೆ ಎಂಬುದು ಜನತೆಗೆ ತಿಳಿದಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ರೈತರ ಹಿತವನ್ನು ಕಾಪಾಡಬೇಕು, ರೈತರಿಗೆ ಅನ್ಯಾಯ ಮಾಡಬಾರದು” ಎಂದು ಎಚ್ಚರಿಕೆ ನೀಡಿದರು.
“2028ರ ಚುನಾವಣೆಯಲ್ಲಿ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ನಿರಾಣಿ ಅವರೇ ಬಯಸಿದರೆ ನೇರವಾಗಿ ಅಖಾಡಕ್ಕೆ ಬರೋಣ. ಆಮೀಷವಿಲ್ಲದೆ, ಪ್ರಮಾಣಿಕವಾಗಿ ಕಾರ್ಯಕರ್ತರೊಂದಿಗೆ ಚುನಾವಣೆಗೆ ಸಜ್ಜಾಗೋಣ” ಎಂದು ಸವಾಲು ಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾತರಕಿ, “ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಬಗ್ಗೆ ಜನತೆಗೆ ಸ್ಪಷ್ಟ ಅರಿವು ಇದೆ. ಶಾಸಕರ ವಿರುದ್ಧ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸಬೇಕು” ಎಂದರು. ಕಾಂಗ್ರೆಸ್ ಮುಖಂಡ ಮಹಾದೇವ ಹಾದಿಮನಿ ಮಾತನಾಡಿ, “ಅಂಬೇಡ್ಕರ್, ದೇವರಾಜ ಅರಸು ಭವನಕ್ಕೆ ನೀಡಿದ್ದ ಅನುದಾನವನ್ನು ನಿರಾಣಿಯವರು ಬೇರೆಡೆ ಬಳಕೆ ಮಾಡಿದರು. ಆದರೆ ಜೆ.ಟಿ. ಪಾಟೀಲ ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದಾರೆ” ಎಂದು ಬೆಂಬಲಿಸಿದರು. ಸುದ್ದಿಗೋಷ್ಠಿಯಲ್ಲಿ ಅಣವೀರಪ್ಪ ಪ್ಯಾಟಿಮಠ, ಶಿವಾನಂದ ಮಾದರ, ಅನೀಲ ದಡ್ಡಿ ಸೇರಿದಂತೆ ಹಲವರು ಹಾಜರಿದ್ದರು.






